ನನ್ನವ್ವ ಹನಮು
ಇವಳು ಹಳ್ಳಿಯ ಮುಗ್ಧೆ..ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪುಟ್ಟ ಗ್ರಾಮ ಬೇಲೇಕೇರಿಯಲ್ಲಿ.ಬೀರಪ್ಪ -ವೆಂಕಮ್ಮ ದಂಪತಿಯರ ಎರಡನೆಯ ಪುತ್ರಿಯಾಗಿ ಜನಿಸಿದ ಹನಮು ಶಾಲೆ ಕಲಿತದ್ದು ಕೇವಲ ಮೂರನೆಯ ತರಗತಿಯವರೆಗೆ ಮಾತ್ರ. ಯಾಕೆ ಶಾಲೆ ಕಲೆಯಲಿಲ್ಲ ಎಂದು ಕೇಳಿದಾಗ ಅವಳು ಹೇಳುವ ಉತ್ತರ "ನನ್ನ ಸಣ್ಣ ತಮ್ಮನನ್ನು ಆಡಿಸಲು ನನ್ನ ತಂದೆ-ತಾಯಿ ಶಾಲೆ ಬಿಡಿಸಿದರು". ಹೌದು, ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರಲ್ಲಿಲ್ಲ ! ಅನುಕೂಲ ಇದ್ದವರು ಏಳನೆಯ ತರಗತಿಯ ವರೆಗೆ ಕಲಿಸಿ ಹೆಣ್ಣು ಮಕ್ಕಳನ್ನು ಮದುವೆ ಮಾಡಿಬಿಡುತ್ತಿದ್ದರು. ಆಗಿನ ಕಾಲದಲ್ಲಿ ಏಳನೆಯ ತರಗತಿಯವರೆಗೆ ಕಲಿತರೆ ಪ್ರಾಥಮಿಕ ಶಾಲೆಯ ಶಿಕ್ಷಕಿಯರ ನೌಕರಿ ಸಿಗುತ್ತಿತ್ತು. ಅವಳಿಗೆ ಹದಿನೈದು ತುಂಬುವ ಮೊದಲೇ ತಮ್ಮ ಸಂಬಂಧಿಕರಾದ ಶೀಳ್ಯಯ ರಾಮ ಅನಂತ ನಾಯಕರ ಎರಡನೆ ಮಗನಾದ ಬೊಮ್ಮಯ್ಯನಿಗೆ ಮದುವೆ ಮಾಡಿಕೊಟ್ಟು ಬಿಟ್ಟಿದ್ದರು.ಬೊಮ್ಮಯ್ಯ ಅಯ್ಯೋಧೆಯ ಸಂಸ್ಕೃತ ಪಾಠಶಾಲೆಯಲ್ಲಿ ಶಿಕ್ಷಣ ಮುಗಿಸಿ ಅಂಕೋಲಾದ ಸತ್ಯಾಗ್ರಹ ಸ್ಮಾರಕ ವಿದ್ಯಾಲಯ ದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗಿನ ಕಾಲದ ವೇತನ ತುಂಬ ಕಡಿಮೆ ,ಸಂಸಾರ ಸಾಗಿಸಲು ಸಾಧ್ಯವಾಗುತ್ತಿರಲ್ಲಿಲ್ಲ . ಮುಂದೆ ಶಿಕ್ಷಣ ಮುಂದುವರಿಸಿದ ಬೊಮ್ಮಯ್ಯ ಮಾಸ್ತರ ಸಂಸ್ಕೃತದಲ್ಲಿ ವಿಶಾರದ (ಎಮ್. ಎ ಗೆ ಸಮಾನ) ಮುಗಿಸುತ್ತಾರೆ...