ಕರುಣಾಳು ಬಾ ಬೆಳಕೆ..ಅಂಕೋಲೆಯ ಶಿಕ್ಷಣ ದಾನಿ ಸ.ಪ.ಗಾಂವಕರ 🙏🙏

#ಉತ್ತರಕನ್ನಡಜಿಲ್ಲೆ #ಮಹಾನ್ ಚೇತನ #ಸ.ಪ.ಗಾವಂಕರ #ಶತಮಾನೋತ್ಸವ #ನಾಡವರಸಂಘ #ಕರ್ನಾಟಕದಬಾರ್ಡೋಲಿ 
#ನಮ್ಮಹೆಮ್ಮೆ #Congratulations 🙏🙏🌹🌹🌹
ಇಂದು ಉತ್ತರ ಕನ್ನಡ ಜಿಲ್ಲೆಯ ಸಾಮಾಜಿಕ ವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿದೆ ಎಂದರೆ ಅದಕ್ಕೆ ಅನೇಕ ಮಹನೀಯರ ತ್ಯಾಗ ಹಾಗೂ ಬಲಿದಾನವೇ ಕಾರಣ. ಅಂತಹ ಮಹನೀಯರ ಪಟ್ಟಿಯಲ್ಲಿ ದಿನಕರ ದೇಸಾಯಿಯವರ ಜೊತೆಗೆ ಸರಿಸಮನಾದ ನಿಲ್ಲುವ ಹಳೆಯ ತಲೆಮಾರಿನ ಇನ್ನೊಂದು ಹೆಸರು "ಸಣ್ಣಪ್ಪ ಪರಮೇಶ್ವರ ಗಾವಂಕರ".
ಅಂತಹ ಮೇರು ವ್ಯಕ್ತಿತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವದು ನಮ್ಮೆಲ್ಲರ ಕರ್ತವ್ಯವೂ ಹೌದು.
------------------------------------------------------------
ಸಣ್ಣಪ್ಪ ಪರಮೇಶ್ವರ ಗಾಂವಕರ , 11 ಜನವರಿ 1885 ರಂದು ಕುಮಟಾ ತಾಲ್ಲೂಕಿನ ಪುಟ್ಟ ಗ್ರಾಮ ತೊರ್ಕೆಯಲ್ಲಿ ಜನಿಸಿದರು. ಅವರು ಅದೇ ತಾಲ್ಲೂಕಿನ ತದಡಿಯಲ್ಲಿರುವ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ತಮ್ಮ 40 ನೇ ವಯಸ್ಸಿನಲ್ಲಿ (1925), ಗಾಂವಕರರು ಸಾಂಗ್ಲಿಯ ವಿಲ್ಲಿಂಗ್‌ಡನ್ ಕಾಲೇಜಿನಿಂದ ಬಿ. ಎ ಪದವಿಯನ್ನು ಪಡೆದರು. ಅವರು ಹುಬ್ಬಳ್ಳಿ ಪುರಸಭೆಯಲ್ಲಿ ಅಧಿಕಾರಿಯಾಗಿದ್ದರು. 1942 ರಲ್ಲಿ ತಮ್ಮ ನಿವೃತ್ತಿಯ ನಂತರ, ಸ.ಪ. ಗಾಂವಕರರು ಅವರು "ಕ್ವಿಟ್ ಇಂಡಿಯಾ ಚಳುವಳಿ "ಯಲ್ಲಿ ಭಾಗವಹಿಸಿದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ರರ ಸರ್ಕಾರ ಅವರಿಗೆ ಜೈಲುಶಿಕ್ಷೆ ವಿಧಿಸಿತ್ತು. 

ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಚ್ಚಿದ ಸಂದರ್ಭದಲ್ಲಿ ಕರ್ನಾಟಕದ" ಬಾರ್ಡೋಲಿ "ಎಂದೇ ಕರೆಯುತ್ತಿದ್ದ "ಅಂಕೋಲಾ"ದಲ್ಲಿ ಬ್ರಿಟಿಷರು ಮಕ್ಕಳು -ಮರಿ ಎನ್ನದೇ ಸಿಕ್ಕ ಸಿಕ್ಕವರನ್ನು ಜೈಲಿಗೆ ತುಂಬುತ್ತಿದ್ದ ಸಮಯದಲ್ಲಿ ,ಶಿಕ್ಷಣಪ್ರೇಮಿ ಹಾಗೂ ಪರೋಪಕಾರಿಯಾದ ಇವರು, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು , ತಮ್ಮ ಗಮನಕ್ಕೆ ಬಂದ ಬಡ ಮಕ್ಕಳ ಬಗ್ಗೆ ಆಸಕ್ತಿ ವಹಿಸಿ ಅವರ ಶಿಕ್ಷಣಕ್ಕೆ ತಮ್ಮಿಂದಾದ ಸಹಾಯ ಮಾಡುತ್ತಿದ್ದರು.
 ಹುಬ್ಬಳ್ಳಿಯ ಮುನ್ಸಿಪಲ್ ಸ್ಕೂಲ್ ಬೋರ್ಡ ಆಡಳಿತಾಧಿಕಾರಿಗಳಾಗಿದ್ದ ಸಮಯದಲ್ಲಿ "ಆರ್ಯ ಸಮಾಜದ " ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ತಮ್ಮ ನಾಡವ ಸಮಾಜದ ಆರು ವಿದ್ಯಾರ್ಥಿಗಳಾದ ಅಡಿಗೋಣದ ಶೀಯುತ ಹೊನ್ನಪ್ಪ ನಾಯಕ (ಸರ್ವಮಿತ್ರ ಶಾಸ್ತ್ರಿ),ಸೂರ್ವೆಯ ಶ್ರೀಯುತ ಸಾತು ನಾಯಕ (ಸತ್ಯದೇವ),ಬಾಸಗೋಡದ ಶ್ರೀಯುತ ತಿಮ್ಮಣ ನಾಯಕ (ಚೇತೋಮಿತ್ರ),ತೊರ್ಕೆಯ ಶ್ರೀಯುತ ಅನಂತ ಗಾವಂಕರ (ಅನಂತ ಮಿತ್ರ) ,ವಂದಿಗೆಯ ಶ್ರೀಯುತ ಗೋವಿಂದ ನಾಯಕ (ಗೋವಿಂದ ಪ್ರಸಾದ) ಮತ್ತು ನನ್ನ ತಂದೆಯವರಾದ ಶೀಳ್ಯಯ ಶ್ರೀಯುತ ಬೊಮ್ಮಯ್ಯ ನಾಯಕ (ಸತ್ಯೇಂದ್ರ) ಇವರನ್ನು ಉತ್ತರ ಭಾರತದ ಅಯ್ಯೋಧೆ,ವಾರಣಾಸಿ,ಗೋರಕಪುರ ಮತ್ತು ಲಾಹೋರಗಳಿಗೆ ತಮ್ಮ ಸಂಪರ್ಕವಿದ್ದ ಸಂಸ್ಥೆಗಳಿಗಳಲ್ಲಿ ಇದ್ದುಕೊಂಡು ಸಂಸ್ಕೃತ ಹಾಗೂ ಹಿಂದಿ ಕಲಿಯಲು ಕಳುಹಿಸಿ ಕೊಟ್ಟಿದ್ದು ಇತಿಹಾಸವೇ ಸರಿ.

ಅವರು ಒಬ್ಬ ಭಾರತೀಯ ದಕ್ಷ ರಾಜಕಾರಣಿಯಾಗಿದ್ದರು.ಮುಂದೆ ಸ್ವರಾಜ್ ಪಕ್ಷಕ್ಕೆ ಸೇರಿದ ಅವರು ,ಅಂದಿನ ಬಾಂಬೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಶ್ರೀ ಬಿ ಜಿ.ಖೇರ್ ಇವರ ಸಂಪುಟದಲ್ಲಿ ಸಹಾಯಕ ಮಂತ್ರಿಯಾಗಿಯೂ (1946_47) ಕಾರ್ಯ ನಿರ್ವಹಿಸಿದ್ದರು. 
ಅವರು ಕವಿಗಳು ಹಾಗೂ ಸಾಹಿತಿಗಳಾಗಿದ್ದರು.
' ಸಪ' ಎಂಬ ಹೆಸರಿನಲ್ಲೂ ಇವರು ಕವನಗಳನ್ನು ಬರೆದಿದ್ದಾರೆ. 
ಇದಲ್ಲದೇ * ಮುಗಿಲು, 
                * ಪ್ರಕೃತಿ-ಪ್ರೀತಿ, 
                 * ಪ್ರೇರಣೆ-ಶೋಧನೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ.
 ಅದಲ್ಲದೇ ನಮ್ಮ ದೇಶದ ಪ್ರಖ್ಯಾತ ರಾಷ್ಟ್ರ ಕವಿ ರವೀಂದ್ರನಾಥ ಠಾಗೋರ್ ಅವರ "ನೋಬೆಲ್ ಪುರಸ್ಕೃತ "ಕೃತಿ ‘ಗೀತಾಂಜಲಿ’ಯನ್ನು ಕನ್ನಡಕ್ಕೆ ಅನುವಾದ ಮಾಡಿದ ಗೌರವ ಅವರಿಗೆ ಸಲ್ಲುತ್ತದೆ.

1936 ರಲ್ಲಿ ಉತ್ತರ ಕನ್ನಡದ ಗೋಕರ್ಣದಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಆಯೋಜನೆಯಲ್ಲಿ ಸ.ಪ.ಗಾವಂಕರರು ಪ್ರಮುಖ ಪಾತ್ರ ವಹಿಸಿದ್ದರು.

ಇಂದು ಉತ್ತರ ಕನ್ನಡ ಜಿಲ್ಲೆಯ ನಾಡವರ ಸಂಘದ ಶತಮಾನೋತ್ಸವದ ಶುಭ ಸಂದರ್ಭ ದಲ್ಲಿ ತಮ್ಮ ಜಿಲ್ಲೆಗೆ ಹಾಗೂ ಸಮಾಜದ ಅಭಿವೃದ್ಧಿಗೆ ,ತಮ್ಮ ಸ್ವಾರ್ಥವನ್ನು ಬದಿಗೊತ್ತಿ ,ಶಿಕ್ಷಣವನ್ನು ದಾನಮಾಡಿ , ಇಂದು ನಾಡವ ಸಮಾಜವು ಶೇಕಡಾ 98ರಷ್ಟು ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಕಾರಣಿಭೂತರಾದ ಹಿರಿಯ ಚೇತನ ಶ್ರೀಯುತ ದಿವಂಗತ ಸ.ಪ.ಗಾವಂಕರ ಕಂಚಿನ ಪ್ರತಿಮೆ ಸ್ಥಾಪಿಸುತ್ತಿರುವದು ,ಫಲಾನುಭವಿಗಳಾದ ನಮಗೆಲ್ಲ ಹೆಮ್ಮೆಯ ವಿಷಯ . ಅವರ ವ್ಯಕ್ತಿತ್ವ ನಮ್ಮ ಸಮಾಜಕ್ಕೆ ಮಾದರಿಯಾಗಲಿ ಎಂದು ಹಾರೈಸೋಣ!!!!

*****ಜಿಲ್ಲೆಯ ಪ್ರಸಿದ್ಧ ದಿನಪತ್ರಿಕೆಯಾದ " ಕರಾವಳಿ ಮುಂಜಾವಿ "ನಲ್ಲಿ ಪ್ರಕಟವಾದ ಈ ಲೇಖನವನ್ನು ಬರೆದವರು" ಶ್ರೀ ಶಾಂತಾರಾಮ ನಾಯಕ," ಹಿಚ್ಕಡ. ಖ್ಯಾತ ಸಾಹಿತಿಗಳು ಹಾಗೂ ಸಮಾಜ ಸೇವಕರು,ಅದಲ್ಲದೇ 
 ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ , ರಾಜ್ಯ ಶಿಕ್ಷಕ ಪ್ರಶಸ್ತಿ , ಡಾ ॥ ಸೈಯ್ಯದ್ ಝಮೀರುಲ್ಲಾ ಫರೀಫ್ ಕಾವ್ಯ ಪ್ರಶಸ್ತಿ , ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಹೊಯ್ಸಳ ಪ್ರಶಸ್ತಿ . ( ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಪತ್ರಿಕಾ ಬಳಗ ಮೈಸೂರು ) ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಸುಸ್ತು ಮಾಸ್ತರ ಪ್ರಶಸ್ತಿ , ಸಾಹಿತ್ಯ ಸೇವೆಗಾಗಿ 2019ರ ಶ್ರೀ ಆರ್ . ಎನ್ . ನಾಯಕರ ಪ್ರಶಸ್ತಿಗಳನ್ನು ಪಡೆದ ,ಸತ್ಯಾಗ್ರಹ ಸ್ಮಾರಕ ವಿಶ್ವವಿದ್ಯಾಲಯ ಶೇಟಗೇರಿ,ಅಂಕೋಲಾದ ನಿವೃತ್ತ ಶಿಕ್ಷಕರು. ಧನ್ಯವಾದಗಳು ಸರ್🙏🙏

Comments

Popular posts from this blog

ನನ್ನ ಅವ್ವ 💕