ಪ್ರ ಪ್ರಥಮ ಮಹಿಳಾ ವಚನಕಾರ್ತಿ..ಅಕ್ಕಮಹಾದೇವಿ.
#ಅಕ್ಕಮಹಾದೇವಿ #ವಚನಕಾರ್ತಿ #ಕನ್ನಡದಪ್ರಥಮಮಹಿಳಾಕವಿಯತ್ರಿ #ಸ್ತ್ರಿವಾದಿಚಳವಳಿಯನಿಜವಾದಪ್ರತಿಪಾದಕಿ #SocialReformer #GenderEquality
ಸುಮಾರು 800 ವರ್ಷಗಳ ಹಿಂದೆಯೇ ಕರುನಾಡಿನಲ್ಲಿ "ಮಹಿಳಾ ಸಮಾನತೆ"ಯನ್ನು ಪ್ರತಿಪಾದಿಸಿದ ದಿಟ್ಟ ಶಿವಶರಣೆ ,ಮಹಾನ್ ಸಾದ್ವಿ ಅಕ್ಕಮಹಾದೇವಿ.
ಶರಣರ ಕಾಲದಲ್ಲಿ ರಾಜ್ಯ ವೈಭೋಗವನ್ನು ತ್ಯಜಿಸಿ ವೈರಾಗ್ಯ ತಾಳಿದ ಮಹಾನ್ ಸಾಧ್ವಿ, ಸ್ತ್ರಿವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ, ಶಿವಶರಣೆ ಅಕ್ಕಮಹಾದೇವಿ ಜಯಂತಿಯ ಹಾರ್ದಿಕ ಶುಭಾಶಯಗಳು.🙏🙏🌹🌹
‐----‐------------------------------------------------------
12ನೇ ಶತಮಾನದ ಶರಣ ಚಳುವಳಿಯ ಶ್ರೇಷ್ಠ ಶಿವಶರಣೆ, ವಚನ ಸಾಹಿತ್ಯಕ್ಕೆ ತಮ್ಮದೇ ಆದ ಅನರ್ಘ್ಯ ಕೊಡುಗೆ ನೀಡಿದ ಕನ್ನಡದ ಪ್ರಥಮ ಕವಯತ್ರಿ, "ಶಿವಶರಣೆ ಅಕ್ಕಮಹಾದೇವಿ"
ಶರಣೆ ಅಕ್ಕಮಹಾದೇವಿಯವರು ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರದ, ಶಿರಾಳಕೊಪ್ಪದ ನಡುವೆ ಇರುವ ಉಡುತಡಿ ಎಂಬ ಪುಟ್ಟ ಗ್ರಾಮದಲ್ಲಿ ನಿರ್ಮಲಶೆಟ್ಟಿ ಮತ್ತು ಸುಮತಿ ದಂಪತಿಯರ ಮಗಳಾಗಿ ಜನಿಸಿದರು.
ಅಕ್ಕಮಹಾದೇವಿಯ ಉಜ್ವಲ ಲಾವಣ್ಯಕ್ಕೆ ಮೋಹಿತನಾದ ರಾಜ ಕೌಶಿಕ ಒತ್ತಾಯದಿಂದ ಅವಳನ್ನು ಅರಮನೆ ತುಂಬಿಸಿಕೊಂಡನೆಂದೂ, ತನ್ನ ಭಕ್ತಿಕಜೀವನಕ್ಕೆ ಅಡ್ಡಬರದಂತೆ ವರ್ತಿಸಬೇಕೆಂದು ಅಕ್ಕಮಹಾದೇವಿ ಶರತ್ತು ಹಾಕಿದಳೆಂದೂ, ಆ ಶರತ್ತಿಗೆ ಕೌಶಿಕ ವ್ಯತಿರಿಕ್ತವಾಗಿ ನಡೆದುಕೊಂಡ ಕಾರಣ ಅವಳು ಅರಮನೆಯನ್ನು ತೊರೆದು ಮಲ್ಲಿಕಾರ್ಜುನ ಮೋಹಿತೆಯಾಗಿ ಹೊರಟಳೆಂದೂ ತಿಳಿದು ಬರುತ್ತದೆ. ಈ ಸಂಧರ್ಭದಲ್ಲಿ ಅವಳು ದಿಗಂಬರೆ ಯಾಗಿ ,ಕೇಶಾಂಬರೆಯಾಗಿ ಹೊರಬಿದ್ದಳೆಂದು ಕಾವ್ಯಗಳು ಹೇಳುತ್ತವೆ.
ಉಡುತಡಿಯಿಂದ ಎಲ್ಲವನ್ನೂ ತ್ಯಜಿಸಿ ಹೊರಟ ಅಕ್ಕಮಹಾದೇವಿಯವರು ಮುಂದೆ "ಬಸವ ಕಲ್ಯಾಣದ "ಅನುಭವ ಮಂಟಪದಲ್ಲಿ ಅಲ್ಲಮಪ್ರಭು,ಬಸವಣ್ಣ, ಚೆನ್ನಬಸವಣ್ಣ, ಸಿದ್ದರಾಮ ಮೊದಲಾದ ಶರಣರೊಡನೆ ಕಲ್ಯಾಣದ ಕ್ರಾಂತಿಯಲ್ಲಿ ತಮ್ಮನ್ನು ತಾವೂ ತೊಡಗಿಸಿಕೊಂಡರಲ್ಲದೇ, "ಚನ್ನಮಲ್ಲಿಕಾರ್ಜುನ" ಎಂಬ ಅಂಕಿತ ನಾಮದಲ್ಲಿ ವಚನ ಸಾಹಿತ್ಯಕ್ಕೆ (ಶರಣ ಸಾಹಿತ್ಯ) ತಮ್ಮದೇ ಆದ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.
ಸರಿ ಸುಮಾರು 434ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾಜದ ಅಂಕು- ಡೊಂಕಗಳನ್ನು ತಿದ್ದುವ ಮೂಲಕ ಪುರುಷ-ಪ್ರಧಾನ ಸಮಾಜದ ಕಟ್ಟು ಪಾಡುಗಳ ವಿರುದ್ಧ ಧ್ವನಿ ಎತ್ತಿದ ಮೊಟ್ಟಮೊದಲ ದಿಟ್ಟ ಮಹಿಳೆ ಅಕ್ಕಮಹಾದೇವಿ.
"ಯೋಗಾಂಗತ್ರಿವಿಧಿ" ಅಕ್ಕನ ಪ್ರಮುಖ ಕೃತಿ.
ಅಕ್ಕಮಹಾದೇವಿಯವರ ವಚನಗಳ ಪೈಕಿ ಹಲವಾರು ವಚನಗಳು ಅಪಾರವಾಗಿ ಜನಪ್ರಿಯತೆ ಪಡೆದಿವೆ.ಅವುಗಳಲ್ಲಿ ಪ್ರಮುಖವಾದುದು .....
"ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ ನೊರೆ ತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯ..ಈ ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು"....
"ಅರಿಯದವರೊಡನೆ ಸಂಗವ ಮಾಡಿದಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬಂತೆ. ಬಲ್ಲವರೊಡನೆ ಸಂಗವ ಮಾಡಿದಡೆ ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರ ಸಂಗವ ಮಾಡಿದಡೆ ಕರ್ಪುರದ ಗಿರಿಯನುಎಕೊಂಬಂತೆ"... ಮುಂತಾದವುಗಳು.
ಚಿಕ್ಕ ವಯಸ್ಸಿನಲ್ಲೆ ಸಕಲ ಸುಖವನ್ನು ತ್ಯಜಿಸಿದ ಅಕ್ಕಮಹಾದೇವಿ ,ಸಾಕ್ಷಾತ್ ಶಿವ ( ಮಲ್ಲಿಕಾರ್ಜುನ)ನನ್ನು ಪತಿ ಎಂದು ಸ್ವೀಕರಿಸಿ, ಲೌಕಿಕ ಜಗತ್ತನ್ನು ಧಿಕ್ಕರಿಸಿ, ಕೇಶಾಂಬರೆಯಾಗಿ ನಡೆದ ಅಕ್ಕ, ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ ಪರಮ ಭಕ್ತಳಾಗಿ, ಅವನನ್ನೇ ಆರಾಧ್ಯ ದೈವ ಪತಿಯನ್ನಾಗಿ ಸ್ವೀಕರಿಸಿ , ತನ್ನನ್ನು ಅವನ ಸತಿ ಎಂದು ಭಾವಿಸಿ, ಕೊನೆಗೆ ,ಶ್ರೀಶೈಲದ ಶ್ರೀಮಲ್ಲಿಕಾರ್ಜುನನ ಕದಳಿವನದಲ್ಲಿ ಲಿಂಗ್ಯಕರಾಗುತ್ತಾರೆ.
Comments
Post a Comment