"ಹೋಳಿ ಹುಣ್ಣಿಮೆ "ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ " ಅಂಕೋಲಾದ ಸುಗ್ಗಿ ಹಬ್ಬ "🥳🥳🥳🌹🌹🌹🌹🍀☘🌲🌳
ವಿಡಿಯೋದ ವಿಶೇಷತೆ: ಬೆಳ್ಳಿಯ ಕುಚ್ಚ ಮತ್ತು ಬೆಳ್ಳಿಯ ಕಿರೀಟ, ಬೆಳಸೆ ಸುಗ್ಗಿ ಅಂಕೋಲಾ
----------‐------‐----------‐-------------------------------
ಉತ್ತರ ಕನ್ನಡ ಜಿಲ್ಲೆ ಸಾಂಪ್ರದಾಯಿಕ ಜಾನಪದ ಕಲೆಗಳಾದ ಯಕ್ಷಗಾನ ,ಬೇಡರವೇಷ ,ಸುಗ್ಗಿ ಕುಣಿತ ಮುಂತಾದವೂಗಳ ತವರರೂರು.

  ಹೋಳಿ ಹುಣ್ಣಿಮೆಯ ಬಣ್ಣದ ಓಕುಲಿ ಹಬ್ಬವನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟ ವಾಗಿ "ಸುಗ್ಗಿ ಹಬ್ಬ "ವೆಂದು ಆಚರಿಸಲಾಗುತ್ತದೆ. ಜಿಲ್ಲೆಯ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರು ಸುಗ್ಗಿ ಹಬ್ಬ ವನ್ನು ಭಕ್ತಿ -ಭಾವದಿಂದ ಐದು ದಿನ ಆಚಾರಿಸುತ್ತಾರೆ .

 ಹಾಲಕ್ಕಿ ಒಕ್ಕಲಿಗರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಕಾರವಾರ, ಕುಮಟಾ, ಹೊನ್ನಾವರ ಜಿಲ್ಲೆಗಳಲ್ಲಿ ವಿಶಿಷ್ಟವಾಗಿ ಕಂಡು ಬರುತ್ತಾರೆ. ಇವರ ಮೂಲ ಕಸಬು ಕೃಷಿ. 
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನಲ್ಲಿ ಇಂದು ಕೃಷಿ ಜೀವಂತವಾಗಿದೆ ಎಂದರೆ ಅದಕ್ಕೆ "ಹಾಲಕ್ಕಿ ಒಕ್ಕಲಿಗರು " ಎಂದರೆ ಅತಿಶಯೋಕ್ತಿ ಆಗಲಾರದು .

  ಅಂಕೋಲಾ ತಾಲ್ಲೂಕಿನ ಬೆಳಂಬಾರ,ಬಡಿಗೇರಿ,ಹಡವ,ಬೆಳಸೆ ಮುಂತಾದ ಊರುಗಳಲ್ಲಿ ನೆಲೆಸಿರುವ ಹಾಲಕ್ಕಿ ಒಕ್ಕಲಿಗರು ತರಕಾರಿ, ಹಣ್ಣು- ಹಂಪಲುಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಬೆಳೆದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಾರೆ. 

   ಹಾಲಕ್ಕಿ ಒಕ್ಕಲಿಗರು ಧರ್ಮದಲ್ಲಿ ಬಲವಾದ ನಂಬಿಕೆ ಉಳ್ಳವರು. ಪ್ರಕೃತಿಯ ಮಡಿಲಲ್ಲಿ ಬೆಳೆದ ಇವರು ಪ್ರಕೃತಿಯನ್ನು ದೇವರೆಂದು ಪೂಜಿಸುವ ಸಂಪ್ರದಾಯವುಳ್ಳವರು .ತಮಗೆ ಅನ್ನ ನೀಡುವ ಭೂಮಿತಾಯಿ ,ಜಗತ್ತನ್ನು ಬೆಳಗಿಸುವ ಸೂರ್ಯ ಚಂದ್ರರು ,ಜಲಧಾರೆ ಯನ್ನುಣ್ಣಿಸುವ ಮೇಘಮಾಲೆ ,ಕೃಷಿಗಾಗಿ -ಹೈನ ಕ್ಕಾಗಿ ಬಳಸುವ ದನ -ಕರುಗಳನ್ನು ದೇವರಂತೆ ಪೂಜಿಸುತ್ತಾರೆ. ಪ್ರಕೃತಿಯಲ್ಲಿ ದೊರೆಯುವ ಗಿಡ ಮೂಲಿಕೆಗಳಿಂದ ನಾನಾ ರೀತಿಯ ರೋಗ -ರುಜಿ ನಗಳನ್ನು ಪರಿಹರಿಸುವಲ್ಲಿ ಸಿದ್ಧ ಹಸ್ತರು .
"ಹೋಳಿ ಹುಣ್ಣಿ"ಮೆಗೆ ಇವರು "ಸುಗ್ಗಿ ಹುಣ್ಣಿಮೆ " ಎಂದು ಕರೆಯುತ್ತಾರೆ. ಹಾಲಕ್ಕಿ ಒಕ್ಕಲಿಗರಿಗೆ ಸುಗ್ಗಿ ಹಬ್ಬ ಬಹಳ ಪವಿತ್ರವಾದುದು ,ಅವರ ಮೂಲಗಳ ಪ್ರಕಾರ ಸುಗ್ಗಿ ಕುಣಿತವನ್ನು ಅವರು ದೇವ- ದೇವತೆಗಗಳಿಂದ ಪಡೆದರಂತೆ .

  ಒಮ್ಮೆ ಕೈಲಾಸದಲ್ಲಿ ಗಂಗೆ - ಗೌರಿಯರ ಮಕ್ಕಳಿಗೆ ಯಾವುದಾದರು ಕಲೆಯನ್ನು ಕಲಿಯಬೇಕೆಂಬ ಮನಸ್ಸಾಗುತ್ತದೆ. ಶಿವ ಅವರಿಷ್ಟದಂತೆ ಗುರುವಿನ ಬಳಿಗೆ ಕಳುಹಿಸುತ್ತಾನೆ. ಗುರು ಅವರಿಷ್ಟದಂತೆ ಚೆನ್ನಿಮನ್ನೆ ಆಟ ಕಲಿಸಲೆ? ಹಾಣಿ ಆಟ ಕಲಿಸಲೆ? ಚೆಂಡಾಟಕಲಿಸಲೆ? ಎಂದು ಕೇಳಿದಾಗ ಅವರು ಅವೇಲ್ಲಾ ದನಕಾಯುವ ಹುಡುಗರು ಆಡುವ ಆಟ ಎಂದು ತಿರಸ್ಕರಿಸುತ್ತಾರೆ. ಕೋಲಾಟ ಹರಿಜನರಾಡುವ ಆಟ. ಸಂಗಾಬಾಳ್ಯ ಸಿದ್ದರ ಆಟ, ಯಕ್ಷಗಾನ ಹೈಗರು ಆಡುವ ಆಟವೆಂದು ತಿರಸ್ಕರಿಸುತ್ತಾರೆ. ಆಗ ಗುರು ಸುಗ್ಗಿಯ ಕುಣಿತದೊಂದಿಗೆ ಅದನ್ನು ನಿಮಗೆ ಕಲಿಸಿದರೆ ನಿಮ್ಮ ತಂದೆ ತಾಯಿಗಳು ಒಪ್ಪುವುದಿಲ್ಲ ಎಂದು ಹೇಳಿದಾಗ ಮಕ್ಕಳು ಸುಗ್ಗಿ ಕುಣಿತವನ್ನೆ ಕಲಿಸುವಂತೆ ಒತ್ತಾಯ ಮಾಡುತ್ತಾರೆ. ಅವರ ಒತ್ತಾಯಕ್ಕೆ ಮಣಿದು ಗುರು ಕಲೆಯನ್ನು ಕಲಿಸಿ ಕೊಡುತ್ತಾನೆ. ಅನಂತರ ಮಕ್ಕಳು ಊರಿನ ಮನೆಮನೆಯ ಮುಂದೆ ಸುಗ್ಗಿ ಕುಣಿತ ಪ್ರದರ್ಶನ ನೀಡಲು ಹೋರಡುತ್ತಾರೆ. ಇದನ್ನು ಗಮನಿಸಿದ ಶಂಕರ ನಮ್ಮಂತಹವರಿಗೆ ಇದು ಯೋಗ್ಯವಲ್ಲ ಎಂದು ಹೇಳಿ ಮಕ್ಕಳಿಗೆ ಶಾಪ ನೀಡುತ್ತಾನೆ. ಆಗ ಮಕ್ಕಳ ಕೈಯಲ್ಲಿನ ಕೋಲು ಕುಂಚ ನೆಲಕ್ಕೆ ಬಿದ್ದು ಹೋಗುತ್ತದೆ. ಅಷ್ಟರಲ್ಲಿ ಹಾಲಕ್ಕಿ ಹುಡುಗನೊಬ್ಬ ಅದನ್ನು ಎತ್ತಿ ಕೊಳ್ಳುತ್ತಾನೆ. ಮೊದಲನೆಯ ಆಟದಲ್ಲೆ ಅಪಶಕುನವಾಯಿತೆಂದು ಹುಡುಗರು ಎಲ್ಲವನ್ನು ಹಾಲಕ್ಕಿ ಹುಡುಗನಿಗೆ ಒಪ್ಪಿಸುತ್ತಾರೆ. ಗುರುಗಳು ಐದು ದಿನಗಳ ಕಾಲ ಮಾಂಸಹಾರ ತ್ಯಜಿಸಿ ಹಸಿರು ಗಿಡಗಳನ್ನು ಕಡಿಯದೆ ದೇವರನ್ನು ಪೂಜಿಸಿ, ಈ ಕಲೆಯನ್ನು ಪ್ರದರ್ಶಿಸಬೇಕೆಂದು ಕರಾರು ಹಾಕುತ್ತಾರೆ. ಇದರಿಂದ ಇಂದಿಗೂ ಈ ಸುಗ್ಗಿಯ ಕುಣಿತ ನಡೆದುಕೊಂಡು ಬಂದಿದೆ ಎನ್ನುತ್ತಾರೆ ಕಲಾವಿದರು
  ಸುಗ್ಗಿ ಕಾಲ ಬಂತೆಂದರೆ ಹಾಲಕ್ಕಿಗರ ಮನೆಯೊಳಗೆ ಹರ್ಷದ ಹೊನಲು ಹರಿಯುತ್ತದೆ. ಚಳಿಗಾಲ ಮುಗಿಯುವ ವೇಳೆಗೆ ಬರುವ ಭತ್ತದ ಬೆಳೆಗೆ ಇವರು "ಸುಗ್ಗಿ ಬೆಳೆ" ಎಂದು ಕರೆಯುತ್ತಾರೆ. ಹೀಗಾಗಿ ಈ ಒಕ್ಕಲಿಗರು ಫಾಲ್ಗುಣ ಶುದ್ಧ ದಶಮಿಯಿಂದ ಹುಣ್ಣಿಮೆಯ ವರೆಗೆ ಸುಗ್ಗಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. 
 ಒಂದೊಂದು ಊರಿನಲ್ಲಿ ಅವರದೇ ಆದ ಸಂಪ್ರದಾಯವಿರುತ್ತದೆ .ಬಡಿಗೇರಿ ಸುಗ್ಗಿ, ಹಡವ ಸುಗ್ಗಿ , ಬೆಳಂಬಾರ ಸುಗ್ಗಿ ಮುಂತಾದವುಗಳು .
   ಅಂಕೋಲಾ ತಾಲ್ಲೂಕಿನ ಬೆಳಂಬಾರ ಒಂದು ವಿಶಿಷ್ಟವಾದ ಹಳ್ಳಿ. ಅಲ್ಲಿಯ ಬೊಮ್ಮ ಶಿವನ ಗೌಡರ ಗಿಡ ಮೂಲಿಕೆಯ ಔಷಧ ಪಾರ್ಶ್ವವಾಯು ರೋಗಕ್ಕೆ ರಾಮಬಾಣವಾಗಿದೆ.ಅಲ್ಲಿಯ ಹಾಲಕ್ಕಿ ಸಮುದಾಯದವರು ಸುಗ್ಗಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಬ್ರಿಟಿಷರ ಕಾಲದಿಂದ ಆಚರಿಸುತ್ತಾ ಬಂದಿದ್ದಾರೆ. ಸುಗ್ಗಿ ಕುಣಿತಕ್ಕೆ ಮನಸೋತ ಬ್ರಿಟಿಷರು ಸುಗ್ಗಿ ಕಲಾವಿದರ ತಂಡ ಕ್ಕೆ ಅಂಕೋಲಾದ ಕಲೆಕ್ಟರ್ ಆಫೀಸ್‌ನ ಎದುರು ಕುಣಿಯಲು ಅನುಮತಿಯನ್ನು ನೀಡಿದ್ದರು .ಅದರಂತೆ ಇಂದಿಗೂ ಕೂಡ ಸುಗ್ಗಿ ಕುಣಿತ ಹಾಗೂ ಹಗರಣದ ಪ್ರದರ್ಶನ ಅಂಕೋಲಾದ ತಹಶೀಲ್ದಾರ್ ಕಚೇರಿ ಮುಂದೆ ನಡೆಯುತ್ತ ಬಂದಿದೆ.
  ಸುಗ್ಗಿಯ ಕುರಿತಾದ ನಿರ್ಣಯವನ್ನು ಊರಿನ ಹಿರಿಯ ವ್ಯಕ್ತಿ "ಅರಸು ಗೌಡ "ಇತರೆ ಊರಿನ ಮುಖಂಡರನೆಲ್ಲ ಸೇರಿಸಿ ಒಂದು ದಿನವನ್ನು ನಿಗದಿ ಪಡಿಸುವರು .ಆ ದಿನ ಅರಸು ಗೌಡ ಸುಗ್ಗಿ ಕುಣಿಯುವ ಮೇಳವನ್ನು ಕರೆಯಿಸಿ ಕೋಲು, ಕುಂಚ, ಗುಮಟೆ ,ತಾಳ, ಜಾಗಟಿ ಯನ್ನು ನೀಡುತ್ತಾನೆ. ಆದರ ಜೊತೆಗೆ ಒಂದು ಹರಿವಾಣದಲ್ಲಿ "ಕರಿ ಅಕ್ಕಿ " ನೀಡುತ್ತಾನೆ. ಸುಗ್ಗಿ ಕುಣಿತ ತಂಡದವರಿಗೆ "ಕರಿ ಅಕ್ಕಿ " ತುಂಬಾ ಪವಿತ್ರವಾದದು . ಅದನ್ನು ಅವರು ಸುಗ್ಗಿಯ ಕೊನೆಯ ದಿನದವರೆಗೂ ತಮ್ಮ ಜೊತೆಗೆ ಭದ್ರ ವಾಗಿ ಇಟ್ಟು ಕೊಂಡಿರುತ್ತಾರೆ .
  ಈ ರೀತಿ ಕರಿಯನ್ನು ಸ್ವೀಕರಿಸಿದ ಕಲಾವಿದರ ತಂಡ ಮೊದಲ ದಿನ ರಾತ್ರಿ ಊರ ಹೊರಗಿರುವ "ಕರಿದೇವರ "ಗುಡಿಗೆ (ಕರಿ ಕಣ)ತೆರಳಿ ಅಲ್ಲಿ ಕಾಮ ದೇವರನ್ನು ಪ್ರತಿ ಪ್ರತಿಷ್ಠಾಪಿಸಿ ನಂದಾ ದೀಪವನ್ನು ಹಚ್ಚಿ ರಾತ್ರಿ ಇಡಿ ಹಾಡನ್ನು ಹಾಡುತ್ತಾ ಪ್ರದಕ್ಷಣೆ ಹಾಕುತ್ತಾರೆ. ತಂಡದ ನಾಯಕನು ಹಾಡನ್ನು ಹೇಳುತ್ತಿದ್ದoತೆ ಉಳಿದ ಕಲಾವಿದರು ದನಿಗೂಡಿಸುತ್ತಾರೆ .
  ಅವರು ಹೆಚ್ಚಾಗಿ ದೇವರ ಸ್ಮರಣೆಯ ಹಾಡುಗಳನ್ನು ಹಾಡುತ್ತಾರೆ. ಕರಿ ಕಟ್ಟುವ ಸ್ಥಳವನ್ನು" ಕರಿ ಕಣ " ಎಂದು ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಸುಗ್ಗಿ ತಂಡ ಕರಿ ಕಣದಿಂದ ಹೊರಡುವ ಮುನ್ನ,ಆ ಸ್ಥಳವನ್ನು ಬಿಡುತ್ತಿದ್ದೇವೆ ಎಂದು ಜನರಿಗೆ ತಿಳಿಸಲು " ಹೆದ್ದುoಬೆ ಕೋಲು " ವಾದ್ಯವನ್ನು ಊದುತ್ತಿದ್ದರಂತೆ ,ಅದರ ಧ್ವನಿ ಸರಿಸುಮಾರು ಮೂರರಿಂದ ನಾಲ್ಕು ಕೀಲೋ ಮೀಟರ್ ದೂರದವರೆಗೆ ಕೇಳಿ ಬರುತ್ತಿತ್ತು ಎಂದು ಹೇಳುತ್ತಾರೆ. ಆದರೆ ಈ ವಾದ್ಯಗಳು ಇಂದು ಕೇಳಿ ಬರುತ್ತಿಲ್ಲ. 
  ಕರಿ ದೇವರನ್ನು ಪ್ರತಿಷ್ಠಾಪಿಸಿ ಗ್ರಾಮವನ್ನು ಪ್ರವೇಶಿಸಿದ ಕಲಾವಿದರ ತಂಡಕ್ಕೆ ಗ್ರಾಮದ ಪ್ರತಿಯೊಂದು ಮನೆಯವರೂ ಆರತಿ ಬೆಳಗಿ ಕಾಣಿಕೆ ಸಲ್ಲಿಸಿ ಸುಗ್ಗಿ ಕುಣಿತವನ್ನು ಎದುರು ಗೊಳ್ಳುತ್ತಾರೆ .
  ಗ್ರಾಮ ಸೇರಿದ ಸುಗ್ಗಿ ಕಲಾವಿದರ ತಂಡ ತಮ್ಮ ವಿಶಿಷ್ಟ ಬಗೆಯ ಪೊಷಾಕನ್ನು ಧರಿಸುತ್ತಾರೆ . ಇಲ್ಲಿ "ಸುಗ್ಗಿಯ ಕುಂಚ " ಅಥವಾ ತುರಾಯಿ ಅತ್ಯದ್ಭುತವಾದ ಆಕರ್ಷಣೆಯಲ್ಲಿ ಒಂದು. ಆ ಕುಂಚವನ್ನು ಬೆಂಡು( thermakool),ಬೇಗಡೆ ಗಳಿಂದ ಗುಡಿಗಾರರು ಎಂಬ ಕರಕುಶಲಕರ್ಮಿ ಗಳಿಂದ ಮಾಡಿ ಸಿ ಕೊಂಡಿರುತ್ತಾರೆ . ಈ ಕುಂಚವು ಚಿಗುರು, ಹೂವು, ಹಣ್ಣುಗಳನ್ನು ಹೋಲುವಂತೆ ಇರುತ್ತದೆ. ಕಾಲಿಗೆ ಗೆಜ್ಜೆ ಕಟ್ಟಿ ಸೊಂಟಕ್ಕೆ ಪೈಜಾಮ ಇಲ್ಲವೇ ಸೀರೆಯಿಂದ ನೇರಿಗೆ ಹಾಕಿ, ಕೆಂಪು, ನೀಲಿ,ಹಸಿರು ಹಾಗೂ ನೀಲಿ ಬಣ್ಣದ ಜಾಕೀಟು ಧರಿಸಿ, ಸೊಂಟಕ್ಕೆ ತುಂಡು ವಸ್ತ್ರ ವನ್ನು ಕಟ್ಟಿ ಕೊಳ್ಳುತ್ತಾರೆ . ಕೊರಳಿಗೆ ಮಾಲೆಯನ್ನು ಧರಿಸಿ, ತಲೆಗೆ ರುಮಾಲು ಸುತ್ತಿ ಹಿಂದೆ ಉದ್ದ ಜಡೆಯಂತೆ ಇಳಿಬಿಟ್ಟು ಅದರ ಮೇಲೆ ತುರಾಯಿನ್ನು ಕಟ್ಟಿಕೊಳ್ಳುತ್ತಾರೆ .ತಲೆಗೆ ಕಟ್ಟಿದ ತುರಾಯಿ ಹಕ್ಕಿಗಳ ಗುಂಪು ತಲೆಯ ಮೇಲೆ ಕುಳಿತಂತೆ ಭಾಸವಾಗುತ್ತದೆ. 
 ಹೀಗೆ ವೇಷ ಭೂಷಣಗಳನ್ನು ತೊಟ್ಟ ಯುವಕ ರಿಗೆ "ಸುಗ್ಗಿಯ ಮಕ್ಕಳು "ಎಂದು ಕರೆಯುತ್ತಾರೆ.

  ಸುಗ್ಗಿಯ ವೇಷ ತೊಟ್ಟವರಿಗೆ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗುತ್ತದೆ .ಐದು ದಿನ ವೂ ವೇಷ ವೇಷಧಾರಿಗಳು ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಪಾಲಿಸಲೇ ಬೇಕು. ಇಲ್ಲವಾದರೆ ಆತನನ್ನು ತಂಡದಿಂದ ಬಹಿಷ್ಕರಿಸ ಲಾಗುತ್ತದೆ .ಒಮ್ಮೆ ವೇಷ ತೊಟ್ಟ ಮೇಲೆ ಅದನ್ನು ರಾತ್ರಿಯಾದ ಮೇಲೆಯೇ ಕಳಚಬೇಕು. 
ಊರು ಕೇರಿಯ ಯಜಮಾನರು ಅವರನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕುಣಿಸುತ್ತಾರೆ .ಸುಗ್ಗಿಯ ವೇಷ ತೊಟ್ಟವರಿಗೆ ಕೆಲವೊಂದು ನಿಬಂಧನೆಗಳನ್ನು ವಿಧಿಸಲಾಗುತ್ತದೆ .ಐದು ದಿನ ವೂ ವೇಷ ವೇಷಧಾರಿಗಳು ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಪಾಲಿಸಲೇ ಬೇಕು. ಇಲ್ಲವಾದರೆ ಆತನನ್ನು ತಂಡದಿಂದ ಬಹಿಷ್ಕರಿಸ ಲಾಗುತ್ತದೆ .ಒಮ್ಮೆ ವೇಷ ತೊಟ್ಟ ಮೇಲೆ ಅದನ್ನು ರಾತ್ರಿಯಾದ ಮೇಲೆಯೇ ಕಳಚಬೇಕು .ವೇಷಧಾರಿಗಳು ಚಪ್ಪಲಿ ಹಾಕಿ ನಡೆಯುವಂತಿಲ್ಲ ,ವಾಹನ ಹತ್ತುವಂತಿಲ್ಲ ,ಐದು ದಿನಗಳ ಕಾಲ ತಮ್ಮ ಮನೆಯೊಳಗೆ ಸೇರಿಸುವಂತಿಲ್ಲ, ಅದಲ್ಲದೆ ಮಧ್ಯವನ್ನೂ ಸಹ ವರ್ಜಿಸ ಬೇಕಾಗುತ್ತದೆ. 
  ಊರು ಕೇರಿಯ ಯಜಮಾನರು ಅವರನ್ನು ಸ್ವಾಗತಿಸಿ ಮನೆಯ ಅಂಗಳದಲ್ಲಿ ಕುಣಿಸುತ್ತಾರೆ .ಸುಗ್ಗಿಯ ವೇಷ ಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರ ಕೈಯಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೆಳದ ಗುಮಟೆ ವಾದ್ಯದ ಗತ್ತಿಗನುಗುಣವಾಗಿ ಜಾನಪದ ಶೈಲಿಯ ಹಾಡುಗಳಿಗೆ ಕುಣಿಯುತ್ತಾರೆ .ಹಾಡಿದ ಪದಗಳನ್ನು ಪುನಾರಾವರ್ತನೆಗೊಳಿಸುತ್ತಾ ಕಲಾವಿದರು ಸರಪಳಿಯಂತೆ ಹೆಣೆದುಕೊಂಡು ವರ್ತುಲ, ಉಪ ವರ್ತುಲಗಳಲ್ಲಿ ನಿಂತು ತಾಳ - ಮದ್ದಲೆ ,ಗುಮಟೆಗಳ ತಾರಕ ಸ್ವರಕ್ಕೆ ತಕ್ಕಂತೆ ಕುಣಿಯುತ್ತಾರೆ. ಹಿಮ್ಮೆಳದ ತಾಳ, ಲಯಕ್ಕನುಗುಣವಾಗಿ ಕುಣಿಯುವವರ ಕುಣಿತ ಹಾಗೂ ಅಂಗಾಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ.
  ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ್ದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈಲಿ ಹಿಡಿದಿರುವ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ದವಾಗಿ ಕುಟ್ಟುತ್ತಾರೆ. ವಾದ್ಯಮೇಳದ ಲಯ ಗತಿಗಳಿಗನುಗುಣವಾಗಿ ಚೋಹೋಚೋ,... ಸೋಹೋಚೋ,...ಜಂಗಮ ಜಕ್ಕಮ.. ಚೋ ಹೋಚೋ... ಓಹೋಸಾ, ದಯ್ಯೋ ದಯ್ಯೋ ...ಎಂದು ಮುಂತಾಗಿ ಹಯ್ಲೂ ಹಾಕುತ್ತಾ ವಿವಿಧ ಭಂಗಿಯಲ್ಲಿ ಕುಣಿಯುತ್ತಾರೆ.
  ಇವರ ಜೊತೆಗೆ ರಾಮಾಯಣ, ಮಹಾಭಾರತದ ವೇಷ -ಭೂಷಣ ಧರಿಸಿದ ರಾಮ, ಲಕ್ಷ್ಮಣ, ಸೀತೆ, ಹನುಮಂತ, ಹಾಗೂ ಯಕ್ಷಗಾನ ಪಾತ್ರ ಧರಿಸಿದ ಕಲಾವಿದರು ಜೊತೆ ಗಿರುತ್ತಾರೆ .
  ಸುಗ್ಗಿ ಹಬ್ಬದ ಇನ್ನೊ೦ದು ಆಕರ್ಷಣೆ ಎಂದರೆ ಕರಡಿ ವೇಷಧಾರಿಗಳು .ಇವರು ಮನೆ ಯಲ್ಲಿರುವ ಮಕ್ಕಳನ್ನು ಹೆದರಿಸುತ್ತ ಮುಂದೆ ಸಾಗುತ್ತಾರೆ. 
  ಸುಗ್ಗಿಯ ಕುಣಿತ ಮುಗಿದ ಮೇಲೆ ಅವರಿಗೆ ಕಾಣಿಕೆ ರೂಪದಲ್ಲಿ ಅಕ್ಕಿ -ಕಾಯಿ ಹಾಗೂ ಹಣವನ್ನೂ ನೀಡಿ ಕಳುಹಿಸುತ್ತಾರೆ. ಹೀಗೆ ಪ್ರತಿಯೊಂದು ಒಡೆಯನ ಮನೆಯಲೂ ಕುಣಿದು ಕಾಣಿಕೆ ಸ್ವೀಕರಿಸಿ ಬೇರೆ ಊರುಗಳಿಗೆ ತೆರಳುತ್ತಾರೆ . 
  ರಾತ್ರಿ ಹೊತ್ತು ಬೇರೆ ಊರಿನ ಒಕ್ಕಲಿಗ ಗೌಡರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿ ಅವರಿಗೆ ಆಯಾ ಊರಿನವರು ಊಟದ ವ್ಯವಸ್ಥೆಯನ್ನು ಮಾಡುತ್ತಾರೆ. ಮರುದಿನ ಅಲ್ಲಿಯೇ ವೇಷ ಭೂಷಣ ಧರಿಸಿ ಊರಿ ದೇವರಿಗೆ ಪೂಜೆ ಸಲ್ಲಿಸಿ ಮತ್ತೆ ಮನೆ ಮನೆಗೆ ತೆರಳಿ ಸುಗ್ಗಿ ಕುಣಿಯುತ್ತ ಮುಂದೆ ಸಾಗುತ್ತಾರೆ. ಐದು ದಿನಗಳಲ್ಲಿ ಸುಮಾರು 40 ರಿಂದ 50 ಕೀ. ಮೀ ದೂರವನ್ನು, ಬೆಟ್ಟಗುಡ್ಡಗಳ ದಾರಿಯನ್ನು ಸುಗ್ಗಿ ವೇಷಧಾರಿ ಗಳು ಕ್ರಮಿಸುತ್ತಾರೆ .ನೂರಾರು ಮನೆಗಳಿಗೆ ತೆರಳಿ ತಮ್ಮ ಪ್ರದರ್ಶನವನ್ನು 
ನೀಡುವ ಇವರ ಶ್ರದ್ಧೆ, ಭಕ್ತಿ ಹಾಗೂ ಸಮರ್ಪಣೆ ನಿಜಕ್ಕೂ ಶ್ಲಾಘನೀಯ 

  ಕೊನೆಯ ದಿನ ಹೋಳಿ ಹುಣ್ಣಿಮೆಯ ದಿನ ತಮ್ಮ ಗ್ರಾಮಕ್ಕೆ ತೆರಳಿ ಅಂದು ಊರ ಗೌಡರ ಮನೆಯಲ್ಲಿ ರಾತ್ರಿಯಿಡೀ ಕುಣಿಯುತ್ತಾರೆ .ಆಮೇಲೆ ಸುಗ್ಗಿ ಕಟ್ಟಿದ ಕರಿ ದೇವಸ್ಥಾನಕ್ಕೆ ತೆರಳಿ ವೇಷ ಭೂಷಣಗಳನ್ನು ಅಲ್ಲಿಯೇ ಮರಕ್ಕೆ ಕಟ್ಟಿ ಹೊರಳಿ ತಮ್ಮ ತಮ್ಮ ಮನೆಗಳನ್ನು ಸೇರಿಕೊಳ್ಳುತ್ತಾರೆ
 ಇಂದಿನ ಆಧುನಿಕತೆಯ ಸ್ಪರ್ಶ ಸುಗ್ಗಿ ವೇಷ ಧಾರಿಗಳ ಮೇಲೆ ತುಂಬಾ ಪ್ರಭಾವ ಬೀರುತ್ತಿದೆ .
ನಮ್ಮ ಸಾಂಪ್ರದಾಯಿಕ ಜಾನಪದ ಕಲೆ ಯನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ.

Comments

Popular posts from this blog

ನನ್ನ ಅವ್ವ 💕